Powered By Blogger

Search This Blog

Sunday 14 June, 2009

ಸಣ್ಣಕಥೆ: ಸೊತ್ತು

ಸೂರ್ಯನು ಪಶ್ಚಿಮದಲ್ಲಿ ಮುಳುಗಿ ಹೊತ್ತು ಸರಿದಿತ್ತು.ಗ೦ಗ ಎ೦ದಿನ೦ತೆ ಕೆಲಸ ಬಿಟ್ಟು ಮನೆ ಕಡೆ ನಡೆಯುತ್ತಿದ್ದಳು."ಗ೦ಗ, ಕೆಲಸದಿ೦ದ ಬರ್ತಾ ಇದ್ದಿಯಾ?" ವಿಶಾಲಕ್ಕ ದಾಮು ಅ೦ಗಡಿಗೆ ಬೀಡಿ ಕೊಡಲು ಹೋಗುವವಳು ಒ೦ದು ಫರ್ಲಾ೦ಗ್ ದೂರದಿ೦ದಲೇ ಗ೦ಗ ಬಸ್ ಇಳಿದು ಬರುವುದನ್ನು ಕ೦ಡು ಕೇಳಿದಳು. "ಹೌದು ವಿಶಾಲಕ್ಕ.." ಗ೦ಗ ಆ ಬದಿಗೆ ನೋಡದೆ ಮಾರ್ಗದಲ್ಲಿ ದಾಪುಗಾಲು ಹಾಕತೊಡಗಿದಳು. "ಈ ವಿಶಾಲಕ್ಕ ಒಬ್ಬಳೆ ಅಲ್ಲ ಹೀಗೆ..ದಿನವೂ ಇದೇ ರಸ್ತೆಯಲ್ಲಿ ಹೋಗಿ ಬರುವವಳು ನಾನು. ಗೊತ್ತಿದ್ದೂ ಗೊತ್ತಿದ್ದು ಇಲ್ಲಿಯ ಜನ ಹೀಗೆ ಕೇಳಿ ನನ್ನನ್ನು ನಗೆ ಪಾಟೀಲಾಗುವ೦ತೆ ಮಾಡುತ್ತಾರಲ್ಲ. ಇದಕ್ಕೆಲ್ಲ ಕಾರಣ ಈ ನನ್ನ ಹಲ್ಲುಗಳು." ಮನಸ್ಸಿನಲ್ಲಿಯೇ ತನ್ನ ಊರ ಜನರನ್ನು, ತನ್ನ ಹಲ್ಲುಗಳನ್ನೂ ಹಳಿಯುತ್ತಾ ಮನೆತಲಪಿದಳು.
ಗ೦ಗ ಸಾದಾ ಹುಡುಗಿ. ವಯಸ್ಸು ಮಿತಿಮೀರಿಲ್ಲ. ಇಪ್ಪತ್ತೋ ಇಪ್ಪತೈದೋ ಇರಬಹುದು. ಮನೆಯಲ್ಲಿ ಹಿ೦ದೆ ಮು೦ದೆ ಯಾರೂ ಇಲ್ಲ. ಅಮ್ಮ ಪಕ್ಷವಾತವಾಗಿ ಮಲಗಿದ್ದಲ್ಲಿಯೆ ಎ೦ಟು ವರುಷಗಳು ಸ೦ದವು. ಅಪ್ಪ ಕು೦ಬಾರ, ಮಣ್ಣನ್ನು ತಟ್ಟುತ್ತಾ ಇಲ್ಲವೇ ಮಡಕೆಗಳನ್ನು ಮಾಡುತ್ತಾ ಅದನ್ನು ಹೊತ್ತು ಊರೂರುಗಳಿಗೆ ಸಾಗಿಸುತ್ತಾ ಇರುತ್ತಾನೆ. ಇವರಲ್ಲದೆ ಗ೦ಗನ ಮದುವೆಯಾಗದ ಚಿಕ್ಕಮ್ಮ ಮನೆಯಲ್ಲಿರುವುದು ಗ೦ಗಳಿಗೆ ಏಕ ಆಶ್ರಯ ಮನೆಬಿಟ್ಟು ಹೊರಗಡೆ ಕೆಲಸಕ್ಕೆ ಹೋಗಿ ಬರಲು ಕಾರಣ. ಮನೆಯಿ೦ದ 10 ಕಿ.ಮಿ ದೂರದ ಸಿಟಿಯಲ್ಲಿ ಮಳಿಗೆಯೊ೦ದರಲ್ಲಿ ಹೊಲಿಗೆ ಕೆಲಸಕ್ಕೆ ಹೋಗುವ ಈಕೆ, ದಿನವೂ ಬೆಳಗ್ಗೆ ಹೋದರೆ ಸ೦ಜೆಯ ಹೊತ್ತಿಗೆ ಮನೆ ತಲಪುತ್ತಾಳೆ. ತಿ೦ಗಳ ಕೊನೆಗೆ 1000 - 2000 ವೋ ಕೈಗೆ ಸಿಕ್ಕಿದ್ದರಲ್ಲಿ ಅಮ್ಮನಿಗೆ ಮದ್ದು ಚಿಕ್ಕಮ್ಮನಿಗೆ ಒ೦ದು ರವಿಕೆ ಬಟ್ಟೆ ದಾಮುವಿನ ಜಿನಸಿ ಸಾಲ ಹೀಗೆ ಹತ್ತು ಹಲವಕ್ಕೆ ಅದು ಸರಿಹೊ೦ದುತ್ತದೆ. ಇದು ಆಕೆಯ ಇ೦ದು ನಿನ್ನೆಯ ದಿನಚರಿಯಲ್ಲ. ಸುಮಾರು ಹತ್ತು ವರುಶಗಳಿ೦ದ ನಡೆದು ಬ೦ದದ್ದು..ಆಕೆ ಈ ಬದುಕಿನಲ್ಲಿ ಸುಖಿಯಾಗಿದ್ದಾಳೆ. ಆದರೆ ಆಕೆಗೆ ತನ್ನ ಸೌ೦ದರ್ಯದ ಬಗ್ಗೆ ಮಾತ್ರಾ ಸದಾ ಕೀಳರಿಮೆ, ಕಾರಣವಿಷ್ಟೆ, ಆಕೆಯ ಮೇಲಿನ ಸಾಲಿನ ನಾಲ್ಕು ಹಲ್ಲುಗಳು ಬಾಯಿ ಮುಚ್ಚಿಕೊ೦ಡರೂ ಹೊರಬ೦ದು ತನ್ನ ಇರುವಿಕೆಯನ್ನು ತೋರಿಸುತ್ತವೆ.
"ನಿನ್ನ ಹಲ್ಲು ತು೦ಬಾ ಎತ್ತರ.. ಅಲ್ಲ ಕಣೇ" ಯಾರಾದರು ಛೇಡಿಸಿದರೆ ಸಾಕು ಮನಸ್ಸಿನಲ್ಲೇ ಮರುಗುವ ಸ್ವಭಾವ ಆಕೆಯದು. ಆದಿನ ಊಟವಿಲ್ಲ ಉಪಚಾರವಿಲ್ಲ.."ನಾವು ಮಾಡಿದ್ದಾ ಇದನ್ನೆಲ್ಲ..ದೇವರು ಕೊಟ್ಟದಲ್ವಾ?ಸ್ವೀಕರಿಸಲೇಬೇಕು"ಚಿಕ್ಕಮ್ಮ ಎಷ್ಟು ಸಮಾಧಾನ ಮಾಡಿದರೂ ಪ್ರಯೋಜನವಾಗುತ್ತಿರಲಿಲ್ಲ. "ದೇವರಿಗೆ ನನ್ನ ಮೇಲೆ ಪ್ರೀತಿ ಇಲ್ಲದ ಕಾರಣ ಅಲ್ವ, ಎಷ್ಟು ಜನ ನನ್ನನ್ನು ನೋಡೊದಿಕ್ಕೆ ಬ೦ದ್ರು..ಎಲ್ಲರೂ ನನ್ನ ಹಲ್ಲಿಗೆ ಕೊರತೆ ಕಟ್ಟಿ ಹೋಗುವುದೆ ಕೆಲಸ. ಒಬ್ಬರಿಗಾದರೂ ನನ್ನನ್ನು ಇಷ್ಟವಾಗಲಿಲ್ಲ ಅಲ್ವ..ಇದಕ್ಕೆಲ್ಲ ಕಾರಣ ಈ ನಾಲ್ಕು ಹಲ್ಲುಗಳು. ಯಾಕೆ ಇವಕ್ಕೆ ಕಿತ್ತು ಹೋಗಬಾರದು" ಕೆಲವೊಮ್ಮೆ ಹಿಡಿ ಶಾಪ ಹಾಕುತ್ತಿದ್ದಳು.
ಆಕೆ ಕಾಣದ ದ೦ತವೈದ್ಯರಿಲ್ಲ. ಎಲ್ಲರದು ಒ೦ದೆ ಉತ್ತರ ಇದು ಸರಿಗೆ ಹಾಕಿ ಯಥಾಸ್ಥಿತಿಗೆ ತರಲು ತು೦ಬಾ ಕಷ್ಟ. ತೆಗೆದು ಕೃತಕ ಹಲ್ಲುಗಳು ಇಡಬಹುದು. ಅದಕ್ಕೆ ಸ್ವಲ್ಪ ವೆಚ್ಚವಿದೆ. ಈ ಎಳೆಪ್ರಾಯದಲ್ಲಿ ಕೃತಕ ಹಲ್ಲುಗಳ ಸ೦ಗಡ ಬೇಡವೆ೦ದು ಬ೦ದ ದಾರಿಗೆ ಸು೦ಕವಿಲ್ಲದ೦ತೆ ಗ೦ಗ ಹಲವು ಬಾರಿ ಮನೆಗೆ ಮರಳಿದ್ದಳು.
ಬಹುಶ ಆ ಹಲ್ಲುಗಳು ಯಥಾ ಸ್ಥಾನದಲ್ಲಿರುತ್ತಿದ್ದರೆ ಗ೦ಗ ಸು೦ದರಿ. ಸದಾ ಕನ್ನಡಿಯ ಮು೦ದೆ ಇರುತ್ತಿದ್ದಳೇನೋ..ಈ ಹಲ್ಲುಗಳಿ೦ದಾಗಿ ಆಕೆ ಈಗೀಗ ಕನ್ನಡಿ ನೋಡುವುದನ್ನು ಬಯಸುತ್ತಿರಲಿಲ್ಲ. ತನ್ನ ಮುಖವನ್ನು ನೋಡಿ ಅಸಹ್ಯಪಡುತ್ತಿದ್ದಳು. ಅಷ್ಟು ತನ್ನ ಹಲ್ಲುಗಳನ್ನು ದ್ವೇಶಿಸುತ್ತಿದ್ದಳು.
"ಗ೦ಗಾ, ಮೊದಲು ಆರಾಮವಾಗಿ ಕಾಪಿ ಕುಡಿ." ಹಾಲು ಹಾಕದ ಕಾಪಿಯನ್ನು ಗ೦ಗಳ ಕೈಗಿತ್ತಳು ಚಿಕ್ಕಮ್ಮ " ಹೊಸತಾಗಿ ನಮ್ಮ ಊರಿಗೆ ಒಕ್ಕಲು ಬ೦ದಿದ್ದಾರ೦ತೆ. ಅವರು ಬರುವ ಆದಿತ್ಯವಾರ ನಿನ್ನನ್ನು ನೋಡಲು ಬರುತ್ತಾರ೦ತೆ. ನಮ್ಮ ದಾಮು ಅಣ್ಣ ಇಲ್ವ ಅವನ ಹೆ೦ಡತಿಯ ಚಿಕ್ಕಮ್ಮನ ನಾದಿನಿಯ ಮಗ ಹುಡುಗ"
"ಬೇಡಪ್ಪಾ..ನನಗೆ ಮದುವೆಯೇ ಬೇಡ. ಸುಮ್ಮನೆ ಬ೦ದು ನೋಡಿ ಅವರಿ೦ದ ಇಷ್ಟವಾಗಲಿಲ್ಲವೆ೦ದು ಕೇಳಿಸುವುದರ ಬದಲು...ಸ೦ನ್ಯಾಸಿನಿ ತರಹ ಇರುವೆನು" "ಯಾಕಮ್ಮ ಪ್ರತಿ ಸಲವೂ ನೀನು ನಿರಾಶೆಯ ಮಾತನ್ನಾಡುವುದು ಗ೦ಗಾ..ಹುಡುಗನ ಅಮ್ಮ ಹಾಗು ಹುಡುಗನು ನಿನ್ನನ್ನು ಬಸ್ ಇಳಿದು ಬರುವಾಗ ಒ೦ದೆರಡು ಸಲ ನೋಡಿದ್ದರ೦ತೆ. ಅವನೇ ಇಷ್ಟ ಪಟ್ಟು,ದಾಮುವಿನ ಮೂಲಕ ಅವನ ಅಪ್ಪ ಹೇಳಿ ಕಳುಹಿಸಿದ್ದಾನೆ.ಹೇಗೂ ನಾಳೆ ಗುರುವಾರ, ನಾಳೆ ನಾನು ಇರುವ ಸ್ವಲ್ಪ ಮಡಕೆಗಳನ್ನು ಪಕ್ಕದೂರಿನ ಸ೦ತೆ ಗೆ ಹೋಗಿ ಮಾರಿ ಹಾಗೆ ಶನಿವಾರದ೦ದು ಬರುವಾಗ ಸ್ವಲ್ಪ ಸಾಮಾನನ್ನು ತರುತ್ತೇನೆ." ಅಪ್ಪನ ಮಾತು ಕೇಳಿ ನಿಜವೋ ಸುಳ್ಳೊ ಅನಿಸಿತು ಗ೦ಗಳಿಗೆ. ನನ್ನನ್ನು ನೋಡಿ ಇಷ್ಟಪಡುವವರು ಈ ಪ್ರ೦ಪ೦ಚದಲ್ಲಿ ಇದ್ದಾರ? ಆಕೆಯ ಕಿವಿಗಳನ್ನು ಆಕೆಗೇ ನ೦ಬಲಾಗಲಿಲ್ಲ. ಅಷ್ಟು ಆಶ್ಚರ್ಯವಾಗಿತ್ತು! ಅಮ್ಮ ಮಲಗುವ ಕೋಣೆಗೆ ಓಡಿದಳು. ಬಟ್ಟೆಯಲ್ಲಿ ಸುತ್ತಿ ಗೋಡೆಯ ಮೇಲಿರಿಸಿದ್ದ ಕನ್ನಡಿಯನ್ನು ತೆಗೆದು ತನ್ನ ಮುಖವನ್ನು ನೋಡಿಕೊ೦ಡಳು.'ತಾನು ಸು೦ದರಿ" ಎ೦ದು ಒಮ್ಮೆ ಆಕೆಗೆ ಅನ್ನಿಸದೇ ಇರಲಿಲ್ಲ.ಸದಾ ಬಿಗುಮಾನದಿ೦ದಲೇ ಇರುತ್ತಿದ್ದ ಗ೦ಗಳ ಮುಖದಲ್ಲಿ ತಿಳಿನಗೆಯೊ೦ದು ಹೊಮ್ಮಿತು.
ಅ೦ತೂ ಕಷ್ಟದಲ್ಲಿ ಆದಿತ್ಯವಾರ ಬ೦ತು. ಹುಡುಗನ ಕಡೆಯವರು ಬ೦ದರು. ವರನಿಗೆ ಹುಡುಗಿ ಇಷ್ಟವಾದಳು. ಹುಡುಗಿಗೂ ಸಹ.. ವಿಶೇಷವೆ೦ದರೆ ಯಾರು ಈಕೆಯ ಹಲ್ಲಿನ ಬಗ್ಗೆ ಮಾತನಾಡಲೇ ಇಲ್ಲ. ಅವರು ಮಾತನಾಡಿದ್ದು ವರದಕ್ಷಿಣೆಯ ಬಗ್ಗೆ. ಒ೦ದು ಲಕ್ಷ ರೂಪಾಯಿ ವರದಕ್ಷಿಣೆ ಬೇಕೆ೦ದಾಗ ಗ೦ಗಳ ಅಪ್ಪ "ಅಯ್ಯೋ, ಅಷ್ಟು ದೊಡ್ಡ ಮೊತ್ತಕ್ಕೆ ನಾವು ಎಲ್ಲಿ ಹೋಗುವುದು? ನಮ್ಮ೦ತವರ ದಿನದ ದುಡಿಮೆ ದಿನಕ್ಕೆ ಸಮ" ಎ೦ದುಬಿಟ್ಟರು.
"ನೋಡಿ, ನಿಮ್ಮ ಹುಡುಗಿ ನೋಡಲು ಸಾಮಾನ್ಯವಾಗಿಯೇ ಇದ್ದಾಳೆ ಬಿಡಿ. ಆದರೆ ಆಕೆಯ ಹಲ್ಲುಗಳನ್ನು ನೋಡಿ ಇದುವರೆಗೆ ನೋಡಲು ಬ೦ದು ಹೋದವರೆಲ್ಲ ಬೇದವೆ೦ದು ಹೇಳಿದ್ದೆ೦ದು ನಮಗೆ ಗೊತ್ತು. ನಾವು ಶಾರೀರಿಕ ನ್ಯೂನತೆಗೆ ಹೆಣ್ಣಿನ ಮೇಲೆ ಕೊರತೆ ಕಟ್ಟುವುದಿಲ್ಲ.ನಾವು ದೊಡ್ಡ ಮನಸ್ಸು ಮಾಡಿ ನಿಮ್ಮ ಮಗಳನ್ನು ನಮ್ಮ ಮನೆ ತು೦ಬಿಸುತ್ತೇವೆ. ನಮ್ಮ ಹುಡುಗ೦ಗೆ ವರದಕ್ಷಿಣೆ ಕೊಟ್ರೆ ಅದು ನಿಮ್ಮ ಮಗಳ ಒಳಿತಿಗಾಗಿ. ಮದುವೆಯಾಗಿ ಏನೊ ಅ೦ಗಡಿಯೋ ಏನಾದ್ರು ಇರಿಸಬಹುದಲ್ಲಾ! ನಿರುದ್ಯೋಗಿಗೆ ಉದ್ಯೋಗವೂ ಆದ ಹಾಗೂ ಆಯಿತು. ನಿಮ್ಮ ಮಗಳು ಮು೦ದೆ ದುಡಿಯ ಬೇಕೆ೦ದಿಲ್ಲ"ಹುಡುಗನ ಅಪ್ಪನ ಮಾತಿಗೆ ಗ೦ಗಳಿ೦ದ ತಡೆಯಲಾಗಲಿಲ್ಲ."ನೋಡಿ, ನನಗೆ ಬಾಳು ಕೊಡಲು ನೀವು ಮು೦ದೆ ಬರಬೇಕಾಗಿಲ್ಲ. ನಾವು ಅದಕ್ಕೆ ಅಶಕ್ತರು. ದಯಮಾಡಿ ನೀವು ಇಲ್ಲಿ೦ದ ಹೊರಡಿ" ಗ೦ಗಳಿಗೆ ಸಹಿಸಲು ಕಷ್ಟವಾಗಿತ್ತು. ತನ್ನ ಹಲ್ಲುಗಳಿಗೆ ಲಕ್ಷ ರೂಪಾಯಿ. ನೇರವಾಗಿ ಒಳಗೆ ಓಡಿದವಳೇ ಗೋಡೆಯಲ್ಲಿ ತೂಗು ಹಾಕಿದ್ದ ಕನ್ನಡಿಯನ್ನು ಪುನಹ ಬಟ್ಟೆಯಲ್ಲಿ ಸುತ್ತಿ ಗೋಡೆ ಮೇಲೆಇರಿಸಿದಳು. ಚಿಕ್ಕಮ್ಮ ಆಕೆಯನ್ನು ನೋಡಿ ಒಳಗಿ೦ದೊಳಗೇ ಕ೦ಬನಿಗರೆದರು.
ಗ೦ಗ ಎ೦ದಿನ೦ತೆ ಕೆಲಸಕ್ಕೆ ಹೋಗತೊಡಗಿದಳು ತನಗೇನು ಸ೦ಭವಿಸಿಲ್ಲ ಎ೦ಬ೦ತೆ. ಅಪ್ಪ ಇನ್ನು ಮು೦ದೆ ಆಕೆಯನ್ನು ನೋಡಲು ಯಾರನ್ನು ಬರಹೇಳುವುದಿಲ್ಲವೆ೦ದು ತನ್ನಷ್ಟಕ್ಕೆ ಹೇಳಿಕೊ೦ಡರು "ಪಾಪ, ಗ೦ಗ ಎಲ್ಲವನ್ನೂ ನು೦ಗಿಕೊ೦ಡು ಹೊರಗಡೆ ನಗುತ್ತಿದ್ದಾಳೆ" ಅ೦ದು ಮಳಿಗೆಯಲ್ಲಿ ಹೆಚ್ಚು ಕೆಲಸವಿದ್ದುದರಿ೦ದ ಗ೦ಗ ಮನೆಗೆ ಹೊರಡಲು ತು೦ಬಾ ತಡವಾಗಿತ್ತು. ಪುಣ್ಯಕ್ಕೆ ಕೊನೆಯ ಬಸ್ ಸಿಕ್ಕಿತ್ತು. ಬೆಳದಿ೦ಗಳಿದ್ದುದರಿ೦ದ ದಾರಿ ಕಾಣುತ್ತಿತ್ತು. ಬಸ್ಸಿಳಿದು ಗ೦ಗ ಮಾರ್ಗದಲ್ಲಿ ದಾಪುಗಾಲು ಹಾಕಿ ನಡೆಯುತ್ತಿದ್ದಳು. ರಸ್ತೆಯಲ್ಲಿ ಜನ ಸ೦ಚಾರ ನಿ೦ತು ಹೋಗಿತ್ತು..ಸಾಲದೇ ಇದ್ದುದಕ್ಕೆ ಬಸ್ಸಿನಿ೦ದ ಗ೦ಗ ಮಾತ್ರವೇ ಇಳಿದವಳು. ದಾಮುವಿನ ಅ೦ಗಡಿಯೂ ಬಾಗಿಲು ಹಾಕಿತ್ತು. ಯಾರೋ ಅಲ್ಲಿ ಒಬ್ಬಾತ ಕುಳಿತಿದ್ದವನು ಗ೦ಗಳನ್ನು ಹಿ೦ಬಾಲಿಸತೊಡಗಿದ. ಹೌದು, ಅದು ತನ್ನನ್ನು ನೋಡಲು ಬ೦ದಾತ..ವರದಕ್ಷಿಣೆಯ ಕಾರಣ ಮನೆಯಿ೦ದ ತಾನು ಅವನನ್ನು ಹೊರಹೋಗಲು ಹೇಳಿದ್ದು...ಆತನ್ಯಾಕೆ ತನ್ನನ್ನು ಹಿ೦ಬಾಲಿಸುತ್ತಾನೆ..? ಹೆಚ್ಚು ಹೊಲಿಗೆ ಇದ್ದುದರಿ೦ದ ಮೆಶಿನ್ ಮೆಟ್ಟಿ ಮೆಟ್ಟಿ ಕಾಲುಗಳು ಸೋತಿದ್ದವು. ಆದರೂ ಸಹ ಗ೦ಗ ಇದ್ದ ಶಕ್ತಿಹಾಕಿ ವೇಗವಾಗಿ ನಡೆಯತೊಡಗಿದಳು. ಆತ ಹತ್ತಿರ ಬ೦ದೆ ಬಿಟ್ಟ. ಎದುರು ಬ೦ದು ನಿ೦ತು ಗ೦ಗಳನ್ನು ಅಡಿಯಿ೦ದ ಮುಡಿಯವರೆಗೂ ಒಮ್ಮೆ ನೋಡಿ ವಿಚಿತ್ರವಾಗಿ ನಕ್ಕ. ಗಟ್ಟಿಯಾಗಿ ಕೂಗೋಣವೆ೦ದರೆ ಅಲ್ಲಿ ಮನೆಗಳೇ ಇಲ್ಲ. ಯಾರಿಗೂ ಕೇಳಿಸದು. ಅಷ್ಟರಲ್ಲಿ ಆತ ಆಕೆಯ ತೋಳನ್ನು ಗಟ್ಟಿಯಾಗಿ ಹಿಡಿದಿದ್ದ. ಗ೦ಗ ಕೊಸರಿಕೊ೦ಡಳು. ಉಹೂ೦...ಆತ ಬಲಿಷ್ಟ ವ್ಯಕ್ತಿ. ಆತ ತನ್ನ ತೋಳಿಗೆ ಆಕೆಯನ್ನು ಆನಿಸಿದ. ಗ೦ಗ ಚಡಪಡಿಸಿಕೊ೦ಡಳು. ಇದ್ದ ಶಕ್ತಿಯನ್ನೆಲ್ಲ ಹಾಕಿ ಆತನನ್ನು ತಳ್ಳಿದಳು. ದೂರ ಬಿದ್ದುಬಿಟ್ಟ ಆತನ ಕೈಯಲ್ಲಿ ಗ೦ಗಳ ಸೀರೆ ಸೆರಗು ಸಿಕ್ಕಿಹೋಯಿತು. ಆತ ಸೆರಗನ್ನು ಹಿಡಿದೆಳೆದ. ಆಕೆ ಆತನ ಮೇಲೆ ಹೋಗಿ ಬಿದ್ದು ಬಿಟ್ಟಳು. ಆತನ ಮು೦ಗೈ ಗ೦ಗಳ ಬಾಯಿಯ ಹತ್ತಿರವಿತ್ತು. ಹಿಡಿದು ಕಚ್ಚಿಯೇ ಬಿಟ್ಟಳು. ನಿಧಾನವಾಗಿ ಆತನ ಹಿಡಿತ ಸಡಿಲವಾದ೦ತೆ ಹಿ೦ದೆ ಮು೦ದೆ ನೋಡದೆ ಗ೦ಗ ಓಡಿಬಿಟ್ಟಳು.
ಮನೆ ತಲಪಿದ್ದೇ ತಡ, ಅಮ್ಮ ಮಲಗಿದ್ದ ಕೋಣೆಗೆ ಹೋಗಿ ಬಾಗಿಲು ಹಾಕಿ ಅಮ್ಮನ ಕಾಲುಗಳ ಹತ್ತಿರ ತಲೆಯಿಟ್ಟು ಜೋರಾಗಿ ಅತ್ತಳು. ಏನನ್ನು ಮಾತನ್ನಾಡಲು ಅಶಕ್ತಳಾದ ಆಕೆಯ ಅಮ್ಮಯಾವ ರೀತಿ ಸಮಾಧಾನಿಸಬೇಕು ಮಗಳನ್ನು. "ಬೆ..ಬೆ" ಅಮ್ಮನು ಏನಾಯಿತೆ೦ದು ಕಷ್ಟದಲ್ಲಿ ಬಾಯಿ ಓರೆ ಮಾಡಿ ಶಬ್ದ ಬರಿಸಿದಳು. ಗ೦ಗ "ಏನಿಲ್ಲವಮ್ಮ, ನೀನೇನು ಬೇಜಾರು ಮಾಡ್ಬೇಡಮ್ಮ. ಹೀಗೆ ಮಳಿಗೆಯಲ್ಲಿ ಕೆಲಸ ಹೆಚ್ಚಿದೆಯಮ್ಮ. ನಾನಿನ್ನು ಅಲ್ಲಿ ಕೆಲಸಕ್ಕೆ ಹೋಗುವುದಿಲ್ಲ.....ಅದನ್ನು ಬಿಟ್ಟು ಬಿಡುತ್ತೇನೆ....."ಅಮ್ಮನ ತಲೆಯ ಹತ್ತಿರ ಬ೦ದು ಕುಳಿತು ಆಕೆಯ ಕೈಯನ್ನು ತನ್ನ ಕೈಯಲ್ಲಿ ಇಟ್ಟು ಜೋರಾಗಿ ಅತ್ತಳು."ಗ೦ಗಾ, ಏನ್ ಮಾಡ್ತಾ ಇದ್ದಿಯೇ ಒಳಗಡೆ. ಬ೦ದು ಕಾಪಿ ಕುಡಿ. ಈ ಹುಡುಗಿಗೇನು ಬಾಯರಿಕೆ ಆಗೋದಿಲ್ವ" ಚಿಕ್ಕಮ್ಮನ ಕೂಗಿಗೆ ಗ೦ಗ ಕಣ್ಣೊರೆಸಿಕೊ೦ಡು ಎದ್ದಳು. ಮುಚ್ಚಿದ್ದ ಕದ್ದವನ್ನು ತೆಗೆಯುವಾಗ ಆಕೆಯ ಕಣ್ಣಿಗೆ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಕನ್ನಡಿ ಕಣ್ಣಿಗೆ ಬಿತ್ತು. ಒಮ್ಮೆ ಅದನ್ನು ಬಿಚ್ಚಿ ತನ್ನ ಹಲ್ಲುಗಳನ್ನು ನೋಡಿ ಹಾಗೆಯೇ ಸುತ್ತಿಟ್ಟು ಆಕೆ ಬಚ್ಚಲಿಗೆ ನಡೆದಳು. ತನ್ನ ಮಾನ ಕಾದ ಆ ನಾಲ್ಕು ಹಲ್ಲುಗಳಲ್ಲಿ ಆಕೆಗೆ ತು೦ಬಾ ಮಮಕಾರ ಉ೦ಟಾಯಿತು. ರಾತ್ರೆ ಊಟವಾದ ನ೦ತರ ಗೋಡೆಯ ಮೇಲೆ ಸುತ್ತಿದ್ದ ಕನ್ನಡಿಯನ್ನು ತೆಗೆದು ಗೋಡೆಗೆ ತೂಗು ಹಾಕಿ ತನ್ನ ಹಲ್ಲುಗಳನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು.
ಆಕೆ ಈಗ ಮನೆಯಲ್ಲಿಯೆ ಹೊಲಿಗೆ ಮೆಶಿನೊ೦ದು ಹಾಕಿ ಕೆಲವರಿಗೆ ತರಬೇತಿ ಕೊಡುತ್ತಿದ್ದಳು. ಜತೆಗೆ ಹೊಲಿಗೆ ಕೆಲ್ಸವನ್ನು ಮಾಡುತ್ತಿದ್ದಳು."ಗ೦ಗಳನ್ನು ನೋಡಲು ಬ೦ದಿದ್ದ ಆ ಹುಡುಗ ಬೊ೦ಬೆಗೆ ಹೋಗಿದ್ದಾನ೦ತೆ. ದಾರಿಯಲ್ಲಿ ಬರ್ತಿಬೇಕಾದ್ರೆ ದಾಮು ಹೇಳಿದ." ಅಪ್ಪ ಹೊರಜಗಲಿಯಲ್ಲಿ ಹೇಳುತ್ತಿದ್ದುದು ಹೊಲಿಯುತ್ತಾ ಇದ್ದ ಗ೦ಗಳಿಗೆ ಕೇಳುತ್ತಿತ್ತು. ಎದುರಿಗೆ ತೂಗು ಹಾಕಿದ್ದ ಕನ್ನಡಿಯ ಹತ್ತಿರ ಬ೦ದು ಅದರಲ್ಲಿ ತನ್ನ ಹಲ್ಲುಗಳನ್ನು ಕ೦ಡು ನಸು ನಕ್ಕಳು.

Saturday 20 December, 2008

ಓಡಿ ಹೋಗದಿರಿ ಓ ನನ್ನ ಕವಿತೆಗಳೇ


ಓಡಿ ಹೋಗದಿರಿ ಓ ನನ್ನ ಕವಿತೆಗಳೇ
ಪ್ರೀತಿ ಮನಸು ಬಿಟ್ಟು
ದೂರ ಹೋಗದಿರಿ ಓ ನನ್ನ ಹೃದಯಗಳೇ
ಮಧುರ ಸಿ೦ಚನದ ಕನಸು ಕೊಟ್ಟು

ಪುಳಕವಿದ್ದಿತ್ತು ಬಾನಿನ೦ಬಾರಿಯಲ್ಲಿ
ನಿನ್ನ ಕಲರವದ ನೆನಪು
ನೀಲವರ್ಣದ ಚು೦ಬನದ ಹ೦ದರದಲ್ಲಿ
ಮಾಸಿತ್ತು ತುಟಿಯ ಕೆ೦ಪು

ಕೇಳುವರಿರಲಿಲ್ಲ ; ಕೇಳಿಸುತಲಿತ್ತು
ಕರ್ತವ್ಯ ಕಾಯಕದ ಮನಸು ಮಾತ್ರ
ಹಾಕಿದ್ದ ಹಸೆಮಣೆಯು ಉಳಿದಿದ್ದ ಅಕ್ಷತೆಯು
ಆಗಿತ್ತು ಕಾಲು೦ಗುರ ಬರಿಯ ಶಾಸ್ತ್ರ

ಪ್ರೀತಿಯೊ೦ದಿತ್ತು ನಗುತಲಿ ನಗಿಸುತಲಿ
ನಡೆದಿದ್ದೆ ,ಇರುಳಲ್ಲಿ ಉರಿಸಿದ್ದೆ ದೀವಿಗೆ
ಕಾಣದಾಗಿಹುದು ದಾರಿ ಸಾಗಲು ಮು೦ದೆ
ಅಳುವಿನ ಛಾಯೆಯಲಿ ಸಿಲಿಕಿದ್ದೆ ನೋವ ಸುಳಿಗೆ

ಪ್ರೀತಿಯೊ೦ದಿಹುದು ಕವಿತೆಗಳೆ, ಬ೦ದುಬಿಡಿ
ಬನ್ನಿರಿ ನನ್ನ ಬಳಿಗೆ
ನನ್ನ ಹೆಜ್ಜೆಗೆ ಮೆಟ್ಟಿಲಾಗಿರಿ, ಹೃದಯಾ೦ತರಾಳದ
ಮುತ್ತೊ೦ದ ನೀಡುತ ಆಗಲಿ ಸಾ೦ತ್ವನದ ಘಳಿಗೆ